ಮಿಸಸ್ ಅರ್ಥ್‌ ಇಂಟರ್‌ನ್ಯಾಷನಲ್‌ 2025ರ ಪ್ರಶಸ್ತಿ ಮುಡಿಗೇರಿಸಿಕೊಂಡ ವಿದ್ಯಾ ಸಂಪತ್ ಕರ್ಕೇರ*


*ಮಿಸಸ್ ಅರ್ಥ್‌ ಇಂಟರ್‌ನ್ಯಾಷನಲ್‌ 2025ರ ಪ್ರಶಸ್ತಿ ಮುಡಿಗೇರಿಸಿಕೊಂಡ ವಿದ್ಯಾ ಸಂಪತ್ ಕರ್ಕೇರ*

ಬೆಂಗಳೂರು, ಡಿ.11: ಕರ್ನಾಟಕದ ಆಸ್ಟ್ರಲ್‌ ಪೇಜೆಂಟ್ಸ್‌ ವಿದ್ಯಾ ಸಂಪತ್ ಕರ್ಕೇರ ಅವರು ಮಿಸಸ್ ಅರ್ಥ್‌ ಇಂಟರ್‌ನ್ಯಾಷನಲ್‌ 2025ರ  ಕಿರೀಟ ಮುಡಿಗೇರಿಸಿಕೊಂಡು ಭಾರತಕ್ಕೆ ಕೀರ್ತಿ ತಂದಿದ್ದಾರೆ.  

ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಜಾಗತಿಕ ಅಂತಿಮ ಸುತ್ತಿನಲ್ಲಿ ವಿದ್ಯಾ ಸಂಪತ್‌ ಕರ್ಕೇರ ಅವರು ಭಾರತವನ್ನು ಪ್ರತಿನಿಧಿಸಿ 22 ದೇಶಗಳ ಸ್ಪರ್ಧಿಗಳ ಪೈಕಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಡಿಸೆಂಬರ್ 1 ರಂದು ಪ್ರಾರಂಭಗೊಂಡ ಈ ಸ್ಪರ್ಧೆಯು ಡಿಸೆಂಬರ್‌ 8ರಂದು ತೆರೆ ಕಂಡಿದ್ದು, ಮಂಗಳೂರಿನ ವಿದ್ಯಾ ಸಂಪತ್‌ ಕರ್ಕೇರ ಅವರು ಗೆದ್ದು ಬಂದಿದ್ದಾರೆ. 


ಪ್ರತಿಭಾ ಪ್ರದರ್ಶನ ಸುತ್ತಿನಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಸಾಂಪ್ರದಾಯಿಕ ವಿನ್ಯಾಸವನ್ನು ಪ್ರದರ್ಶಿಸಿದರು. ಮಂಗಳೂರಿನಲ್ಲಿ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಂಡ ಅವರ ಉಡುಗೆಯು ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಹೂ ಕಮಲ ಮತ್ತು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರಗಳನ್ನು ಒಳಗೊಂಡಿತ್ತು. ಅವರ ಕಲಾತ್ಮಕ ಉಡುಗೆಯು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ಪ್ರದರ್ಶಿಸಿತು. 


ಇಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾ ಸಂಪತ್‌, ನನ್ನ ಗೆಲುವಿಗೆ ಆಸ್ಟ್ರಲ್‌ ಪೇಜೆಂಟ್ಸ್‌ ವೇದಿಕೆ, ನನ್ನ ಪತಿ ಕರ್ಕೇರ ಅವರ ಬೆಂಬಲ, ಪ್ರಾದೇಶಿಕ ನಿರ್ದೇಶಕ ದೀಪಕ್ ಗಂಗೂಲಿ ಅವರ ಮಾರ್ಗದರ್ಶನವೇ ಕಾರಣ ಎಂದರು.

ಈ ಕುರಿತು ಕರ್ನಾಟಕದ ಆಸ್ಟ್ರಲ್‌ ಪೇಜೆಂಟ್ಸ್‌ ನ ನಿರ್ದೇಶಕರಾದ ಪ್ರತಿಭಾ ಸಂಶಿಮಠ್ ಮಾತನಾಡಿ,  2026ರಲ್ಲಿ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಆವೃತ್ತಿಯ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧವಾಗುತ್ತಿದೆ. ಈ ವೇಳೆ ವಿದ್ಯಾ ಸಂಪತ್‌ ಅವರ ಸಾಧನೆ ನಿಜಕ್ಕೂ ಐತಿಹಾಸಿಕ ಕ್ಷಣ. ವಿದ್ಯಾ ಅವರ ಗೆಲುವು ನಮ್ಮ ಸಂಸ್ಥೆಯ ಮಾರ್ಗದರ್ಶನ, ಕಠಿಣ ತರಬೇತಿ ಮತ್ತು ಬದ್ಧತೆಯನ್ನು ತೋರುತ್ತದೆ. ಇದು ಭಾರತೀಯ ಸ್ಪರ್ಧಿಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಪ್ರಯತ್ನಕ್ಕೆ  ಸಾಕ್ಷಿಯಾಗಿದೆ. ಈ ವಿಜಯವು ದೇಶಾದ್ಯಂತ ವಿಶ್ವ ದರ್ಜೆಯ ಪ್ರತಿಭೆಯನ್ನು ಪೋಷಿಸುವ ಆಸ್ಟ್ರಲ್‌ನ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಮಂಗಳೂರಿನ ವಿದ್ಯಾ ಅವರು ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಇಂದು ಭಾರತದಾದ್ಯಂತದ ಮಹಿಳೆಯರಿಗೆ, ವಿಶೇಷವಾಗಿ ಟಯರ್‌ 2 ನಗರಗಳ ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಆಸ್ಟ್ರಲ್ ಪೇಜೆಂಟ್ಸ್ ಈ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವನ್ನು ಮರೆಯುವುದಿಲ್ಲ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯ ಮಹಿಳೆಯರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಗುರಿಯನ್ನು ಹೊಂದಿದೆ ಎಂದು ಪ್ರತಿಭಾ ಅವರು ತಿಳಿಸಿದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims