ಶಿಕ್ಷಣವೇ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಪ್ರಬಲ ಸಾಧನ : ರಾಜೀವ್ ಗೌಡ

 ಶಿಕ್ಷಣವೇ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಪ್ರಬಲ ಸಾಧನ : ರಾಜೀವ್ ಗೌಡ


·       ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷರಿಂದ ಎರಡು ದಿನಗಳ ಹವಾಮಾನ ಶಿಕ್ಷಣ ಶೃಂಗಸಭೆಗೆ ವೀಡಿಯೊ ಸಂದೇಶ. ಹವಾಮಾನ ಕಲಿಕೆಯನ್ನು ಮುಖ್ಯವಾಹಿನಿಯ ಶಿಕ್ಷಣದಲ್ಲಿ ಸಂಯೋಜಿಸುವ ಮಾರ್ಗವನ್ನು  ಚರ್ಚಿಸಲಿರುವ ಶೃಂಗಸಭೆ

·       ಹವಾಮಾನ ಶಿಕ್ಷಣಕ್ಕಾಗಿ ನವೀನ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಮತ್ತು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಶಾಲೆಗಳನ್ನು ರಚಿಸುವ ತಂತ್ರಗಳ ಕುರಿತು  ಚರ್ಚೆ

ಬೆಂಗಳೂರು, ಜನವರಿ 30: “ಭಾರತದಲ್ಲಿ, ನಾವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹವಾಮಾನ ಸಂಬಂಧಿತ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಸರ್ವರಿಗೂ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಹೂಡಿಕೆಯಾಗಿದೆ” ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ   ಸಂಶೋಧನಾ ವಿಭಾಗದ  

ಅಧ್ಯಕ್ಷ ಹಾಗು  ಮತ್ತು ಕರ್ನಾಟಕ ಯೋಜನಾ ಆಯೋಗದ ಮಾಜಿ ಅಧ್ಯಕ್ಷ  ಡಾ. ರಾಜೀವ್ ಗೌಡ  ಅಭಿಪ್ರಾಯಪಟ್ಟರು.

ಅವರು ಇಂದು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ನಡೆದ ಭಾರತದ  ಹವಾಮಾನ ಶಿಕ್ಷಣ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ  ವೀಡಿಯೊ ಮೂಲಕ ತಮ್ಮ ಸಂದೇಶವನ್ನು ರವಾನಿಸಿದರು.

ಹವಾಮಾನ ಶಿಕ್ಷಕರ ಜಾಲ (CEN), ಸ್ಕೂಲ್‌ ಆಫ್‌ ಪಾಲಿಸಿ ಆಂಡ್‌ ಗವರ್ನೆನ್ಸ್‌,  ಟಿಆರ್‌ಒಪಿ ಐಸಿಎಸ್‌ಯು/TROP ICSU (ಹವಾಮಾನ ಬದಲಾವಣೆಯ ಬಗ್ಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ  ಪ್ರಾಜೆಕ್ಟ್‌)ಮತ್ತು ಸಾಮಾಜಿಕ ಪರಿಣಾಮ ಸಲಹೆಗಾರ ಸಂಸ್ಥೆ ಅಸರ್‌ ವತಿಯಿಂದ ಆಯೋಜಿಸಲಾದ ಈ ಎರಡು ದಿನಗಳ ಕಾರ್ಯಕ್ರಮವು ಶಿಕ್ಷಣದ ಮೂಲಕ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಅಳವಡಿಸಿಕೊಳ್ಳಬಹುದಾದ ಒಳನೋಟಗಳು ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನೀಡಬಹುದಾದ ಶಿಫಾರಸ್ಸುಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಹವಾಮಾನ ಬದಲಾವಣೆ ಕುರಿತ ಪಠ್ಯವನ್ನು ಮುಖ್ಯವಾಹಿನಿಯ ಶಾಲಾಶಿಕ್ಷಣದೊಂದಿಗೆ ಸಂಯೋಜಿಸುವತ್ತ ಕೇಂದ್ರೀಕರಿಸಿದ ಎರಡು ದಿನಗಳ ಈ ಶೃಂಗಸಭೆಯು ದೇಶಾದ್ಯಂತ 100 ಕ್ಕೂ ಹೆಚ್ಚು ಪ್ರಮುಖ ಶಿಕ್ಷಣತಜ್ಞರು, ನೀತಿ ನಿರೂಪಕರು, ಯುವ ನಾಯಕರು ಮತ್ತು  ಆಸಕ್ತರನ್ನು ಒಳಗೊಂಡಿತ್ತು. 

"ಹವಾಮಾನ ಶಿಕ್ಷಣವನ್ನು ಪಠ್ಯದಲ್ಲಿ ಸಂಯೋಜಿಸಲು ಇರುವ ಮಾರ್ಗವೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿದಂತೆ ವಿವಿಧ ಅಧ್ಯಯನ ಕ್ಷೇತ್ರಗಳನ್ನು ಒಳಗೊಳ್ಳುವ ಅಂತರಶಿಸ್ತೀಯ ಪಠ್ಯಕ್ರಮವನ್ನು ರಚಿಸುವುದು. ಉದಾಹರಣೆಗೆ, ಹವಾಮಾನ ಬದಲಾವಣೆಯು ವಿವಿಧ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಅದು ವಿಶ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ  ಎಂಬುದನ್ನು ಪ್ರದರ್ಶಿಸುವುದು ಮತ್ತು ಇದರಿಂದ  ನೈತಿಕ  ಮೌಲ್ಯಗಳ ಮೇಲಾಗುವ ಪರಿಣಾಮಗಳ ಕುರಿತ ಚರ್ಚೆಗಳು ಇವುಗಳನ್ನು ಈ ಪಠ್ಯಕ್ರಮದ ಚೌಕಟ್ಟಿನಲ್ಲಿ ಸೇರಿಸಿಕೊಳ್ಳಬಹುದು. ಈ ವಿಧಾನವು ವಿದ್ಯಾರ್ಥಿಗಳು ತಮ್ಮ ತರಗತಿಯ ಕಲಿಕೆಯನ್ನು ಪ್ರಪಂಚದ ನೈಜ ಸಮಸ್ಯೆಗಳೊಂದಿಗೆ ಹೋಲಿಸಿ ಅಭ್ಯಸಿಸಲು ಸಹಾಯ ಮಾಡುತ್ತದೆ, ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸುತ್ತದೆ, ”ಎಂದು ರಾಜೀವ್‌ ಗೌಡ ಹೇಳಿದರು.

ಈ ಶೃಂಗ ಸಭೆಯಲ್ಲಿ  ತಮಿಳುನಾಡು ಗ್ರೀನ್ ಮಿಷನ್‌ನ ನಿರ್ದೇಶಕಿ ಮಾಧವಿ ಯಾದವ್, ಐಎಫ್‌ಎಸ್; ಎನ್‌ಸಿಇಆರ್‌ಟಿಯ ವಿಜ್ಞಾನ ಮತ್ತು ಗಣಿತ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ  ಡಾ. ಚೊಂಗ್ ಶಿಮ್ರೇ; ಶಿಕ್ಷಣತಜ್ಞ, ಲೇಖಕ ಮತ್ತು ಹವಾಮಾನ ಬದಲಾವಣೆ ಚಿಂತನೆಯ ನೇತಾರ   ಮ್ಯಾಥ್ಯೂ ಪೈ; ಅಸರ್ ಸಾಮಾಜಿಕ ಪರಿಣಾಮ ಸಲಹೆಗಾರ ಸಂಸ್ಥೆಯ​​ಸಂವಹನ ಮುಖ್ಯಸ್ಥ ಬ್ರಿಕೇಶ್ ಸಿಂಗ್; ಮತ್ತು ಹಿರಿಯ ಪರಿಸರ ಪತ್ರಕರ್ತೆ ಜಯಶ್ರೀ ನಂದಿ ಮುಂತಾದ ತಜ್ಷರು ಭಾಗವಹಿಸಿದ್ದರು.

"ನಾಳೆಗಾಗಿ ಕಲಿಕೆ: ಹವಾಮಾನ ಕುರಿತ ಯೋಜನೆಗಳನ್ನು ಕಾರ್ಯರೂಪಕ್ಕೆ ಪರಿವರ್ತಿಸುವಲ್ಲಿ ಶಿಕ್ಷಣದ ಪಾತ್ರ " ಎಂಬ ವರದಿಯನ್ನು ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವರದಿಯು  ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ಮತ್ತು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ದೆಹಲಿಯ ಹವಾಮಾನ ಬದಲಾವಣೆಗಾಗಿ ರಾಜ್ಯ ಕ್ರಿಯಾ ಯೋಜನೆಗಳು (SAPCCs), ಹವಾಮಾನ ಶಿಕ್ಷಣವನ್ನು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಲು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು  ವಿಶ್ಲೇಷಿಸುತ್ತದೆ.

ಈ ವರದಿಯು,  ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC)ಯು ಹವಾಮಾನ ಬದಲಾವಣೆ ಕುರಿತಾಗಿ ಸಾರ್ವಜನಿಕ ಜಾಗೃತಿ ಮತ್ತು ಸಾರ್ವಜನಿಕರ ಸಾಮರ್ಥ್ಯ ವೃದ್ಧಿಯನ್ನು ಉಲ್ಲೇಖಿಸುತ್ತದೆಯಾದರೂ, ಹವಾಮಾನ ಶಿಕ್ಷಣವನ್ನು ನೀಡಲು ಅಗತ್ಯವಿರುವ ಸಮಗ್ರ ಕಾರ್ಯತಂತ್ರವನ್ನು ರೂಪಿಸುವಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆ  ವಿಫಲಗೊಂಡಿದೆ ಎಂಬ ಅಂಶವನ್ನು ಉಲ್ಲೇಖಿಸುತ್ತದೆ. ಜೊತೆಗೆ ರಾಷ್ಟ್ರೀಯ ಕ್ರಿಯಾ ಯೋಜನೆಯು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ  ಶಾಲೆಗಳ ಪಾತ್ರ, ಶಿಕ್ಷಕರ ತರಬೇತಿ ಮತ್ತು ಹವಾಮಾನ ಶಿಕ್ಷಣದ ಏಕೀಕರಣವನ್ನು ಹವಾಮಾನ ಶಿಕ್ಷಣದ ತಂತ್ರಗಳ ಪ್ರಮುಖ ಅಂಶವಾಗಿ ಪರಿಗಣಿಸುವುದನ್ನು ಕಡೆಗಣಿಸಿದೆ ಎಂಬುದನ್ನು ವರದಿಯಲ್ಲಿ ಗಮನಿಸಲಾಗಿದೆ. ಅದೇ ರೀತಿ, ರಾಜ್ಯಕ್ರಿಯಾ ಯೋಜನೆಗಳು, ಜಾಗೃತಿಯ ಮಹತ್ವವನ್ನು ಒಪ್ಪಿಕೊಳ್ಳುವಾಗ, ಮರ ನೆಡುವಂತಹ ಪಠ್ಯೇತರ ಚಟುವಟಿಕೆಗಳಿಗೆ ತಮ್ಮ ವಿಧಾನವನ್ನು ಸೀಮಿತಗೊಳಿಸಿವೆ ಎಂಬುದನ್ನು ವರದಿಯು ಉಲ್ಲೇಖಿಸುತ್ತದೆ.

ವರದಿಯು ಹವಾಮಾನ ಶಿಕ್ಷಣವನ್ನು ಬಲಪಡಿಸಲು ಹವಾಮಾನ ಶಿಕ್ಷಣಕ್ಕಾಗಿ ರಾಷ್ಟ್ರೀಯ ಚೌಕಟ್ಟು, ಬಜೆಟ್ ಹಂಚಿಕೆ, ಇತರೆ ಪಠ್ಯೇತರ ಚಟುವಟಿಕೆಗಳ ಅಳವಡಿಕೆ, ಶಿಕ್ಷಕರ ತರಬೇತಿ, ಉನ್ನತ ಶಿಕ್ಷಣದ ಏಕೀಕರಣ ಇವೇ ಮೊದಲಾದ ಇತರ ಕ್ರಮಗಳನ್ನು ಶಿಫಾರಸ್ಸು ಮಾಡುತ್ತದೆ.

ಹವಾಮಾನ ಶಿಕ್ಷಣಕ್ಕೆ ನವೀನ ವಿಧಾನಗಳು

ಶೃಂಗಸಭೆಯಲ್ಲಿ ಪ್ರಮುಖ ಚರ್ಚೆಗಳು ಹವಾಮಾನ ಶಿಕ್ಷಣಕ್ಕಾಗಿ ನವೀನ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳ ಮೇಲೆ ಕೇಂದ್ರೀಕೃತವಾಗಿವೆ, ಜೊತೆಗೆ ಹವಾಮಾನ-ಸ್ಥಿತಿಸ್ಥಾಪಕ / ಎಲ್ಲಾ ರೀತಿಯ ಹವಾಮಾನಕ್ಕೂ ಒಗ್ಗಿಕೊಳ್ಳಬಲ್ಲ ಶಾಲೆಗಳನ್ನು ರಚಿಸುವ ತಂತ್ರಗಳ ಮೇಲೆ ಕೇಂದ್ರೀಕೃತವಾಗಿವೆ.

ಎನ್‌ಸಿಇಆರ್‌ಟಿಯ ಡಾ. ಶಿಮ್ರೇ, ಹವಾಮಾನ ಶಿಕ್ಷಣವನ್ನು ಈಗಾಗಲೇ ಚಾಲ್ತಿಯಲ್ಲಿರುವ ಪಠ್ಯಕ್ರಮಗಳಲ್ಲಿ ಸಂಯೋಜಿಸುವ ಮಹತ್ವವನ್ನು ವಿವರಿಸುತ್ತಾ ʻʻಹವಾಮಾನ ಶಿಕ್ಷಣ ಇನ್ನು ಮುಂದೆ ಶೋಕಿಯಲ್ಲ, ಬದಲಿಗೆ ಅವಶ್ಯಕತೆಯಾಗಿದೆ. ಹವಾಮಾನ ಶಿಕ್ಷಣವನ್ನು ವಿದ್ಯಾರ್ಥಿಗಳು ನಿಜವಾದ ಅರ್ಥದಲ್ಲಿ ಕಲಿಯುವುದನ್ನು ಪ್ರೋತ್ಸಾಹಿಸಲು, ನಾವು ಪಠ್ಯಪುಸ್ತಕಗಳಲ್ಲಿ ಕೇವಲ ಅಂಕಿಅಂಶಗಳನ್ನು ಹೇಳುವುದನ್ನು ಮೀರಿ ಸಾಗಬೇಕು. ಹವಾಮಾನ ಬದಲಾವಣೆಯ ಪರಿಣಾಮವನ್ನು ಅವರು ಈಗಾಗಲೇ ಅನುಭವಿಸದಿದ್ದರೆ, ಶೀಘ್ರದಲ್ಲೇ ಅದನ್ನು ಎದುರಿಸಲಿದ್ದಾರೆ.  ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಿಕೆಯ ಪ್ರಕ್ರಿಯೆಗೆ ಕೊಡುಗೆ ನೀಡಲು ಅವರನ್ನು ಸಿದ್ಧಪಡಿಸುವುದು ನಮ್ಮ ಕರ್ತವ್ಯ. ಸರ್ಕಾರವು ವಾರಕ್ಕೆ 29 ಗಂಟೆಗಳು, 12 ವರ್ಷಗಳ ಶಾಲಾ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತದೆ – ಈ ಅವಧಿಯನ್ನು ವಿದ್ಯಾರ್ಥಿಗಳನ್ನು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ತಗ್ಗಿಸುವಿಕೆಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಅರ್ಥಪೂರ್ಣ ಚಟುವಟಿಕೆಗಳಿಂದ ತುಂಬಿಸಬೇಕು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಮಾತ್ರ  ಬದಲಾವಣೆಯನ್ನು ತರಬಹುದು" ಎಂದರು.

ಹವಾಮಾನ ಶಿಕ್ಷಣವನ್ನು ಅಸ್ತಿತ್ವದಲ್ಲಿರುವ ಪಠ್ಯಕ್ರಮದಲ್ಲಿ ಅಳವಡಿಸಲು ತಮಿಳುನಾಡು ಸರ್ಕಾರ ಮಾಡಿದ ಪ್ರಯತ್ನಗಳ ಬಗ್ಗೆ ಮಾತನಾಡುತ್ತಾ, ಮಾಧವಿ ಯಾದವ್, "ಅನುಷ್ಠಾನವಿಲ್ಲದ ಯಾವುದೇ ನೀತಿಯು ವಿಫಲವಾಗುತ್ತದೆ. ಅನುಷ್ಠಾನಕ್ಕಾಗಿ, ನಮಗೆ ಸಮಗ್ರ ವಲಯಗಳ ಸಹಕಾರ ಮಾದರಿಯ ಅಗತ್ಯವಿದೆ. ಹವಾಮಾನ ಸಾಕ್ಷರತೆಯು ಹವಾಮಾನ ನೀತಿಗಳ ಮೇಲೆ ಪ್ರಭಾವ ಬೀರುವ ಆರಂಭಿಕ ಹೆಜ್ಜೆ ಎಂದು ನಾವು ಅರಿತುಕೊಂಡಿದ್ದೇವೆ” ಹೇಳಿದರು. 

ತಮಿಳುನಾಡಿನ ಶಾಲೆಗಳಲ್ಲಿ ತಾವು ಕೈಗೊಳ್ಳುತ್ತಿರುವ ಉಪಕ್ರಮಗಳ ಕುರಿತು ಮಾತನಾಡಿದ ಮಾಧವಿ ಯಾದವ್‌ ʻʻಹವಾಮಾನ ಶಿಕ್ಷಣ ಸಾಕ್ಷರತಾ ಮಾದರಿಯನ್ನು ನಮ್ಮ ಅಸ್ತಿತ್ವದಲ್ಲಿರುವ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಲ್ಲಿ ಸಂಯೋಜಿಸುವ ಕೆಲಸವನ್ನು ನಾವು ಪ್ರಾರಂಭಿಸಿದ್ದೇವೆ. ಮುಂದಿನ 2-3 ವರ್ಷಗಳಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ನಾವು ಹಸಿರು ಶಾಲೆಗಳು, ಎಲ್ಲಾ ತರಗತಿಗಳಿಗೆ ಪರಿಸರ ಶಿಕ್ಷಣ, ಸಾವಯವ ಅಡುಗೆ, ತೋಟಗಾರಿಕೆ ಇತ್ಯಾದಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ತಮಿಳುನಾಡು ಹವಾಮಾನ ಗ್ರಂಥಾಲಯದ ಪರಿಕಲ್ಪನೆಯನ್ನು ತರುತ್ತಿದೆ. ವಾರಕ್ಕೊಮ್ಮೆ,  ಮಕ್ಕಳು ಹವಾಮಾನ ಬದಲಾವಣೆಗೆ ಹೊಂದಾಣಿಕೆ ಮತ್ತು ಅದನ್ನು ತಗ್ಗಿಸುವಿಕೆಯ ಕುರಿತು ಪುಸ್ತಕಗಳನ್ನು ಓದಬೇಕು ಮತ್ತು ಅವರ ತರಗತಿಯಲ್ಲಿ ಇತರ ಮಕ್ಕಳೊಂದಿಗೆ ಅದನ್ನು ಹಂಚಿಕೊಳ್ಳಬೇಕು, ”ಎಂದು ಹೇಳಿದರು.

ಶೃಂಗಸಭೆಯ ಎರಡನೇ ದಿನವು ಉತ್ತಮ ಅಭ್ಯಾಸಗಳು, ಶಿಕ್ಷಣದ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಭಾಗಿತ್ವದ ವಿಧಾನಗಳು, ನೀತಿ ನಿರೂಪಣೆಗಾಗಿ ಸಾಧನಗಳು ಮತ್ತು ಪರಿಣಾಮಕಾರಿ ಸಂವಹನದ ಕುರಿತಾದ ಕಾರ್ಯಾಗಾರಗಳ ಮೇಲೆ ಕೇಂದ್ರೀಕರಿಸಲಿದೆ.

"ಹವಾಮಾನ ಶಿಕ್ಷಕರ ಜಾಲ (CEN)ವನ್ನು   ಹವಾಮಾನ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ರಚಿಸಲಾಗಿದೆ. ಶಿಕ್ಷಣ ಎಂದರೆ ಕೇವಲ ಜ್ಞಾನಗಳಿಕೆ ಅಲ್ಲ - ಇದು ಸಮುದಾಯಗಳನ್ನು ನಿರ್ಮಿಸುವುದು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಲು ನಮಗೆ ಅಗತ್ಯವಿರುವ ಸಾಮರ್ಥ್ಯಗಳನ್ನು ಬೆಳೆಸುವುದು ಎಂಬ ಕಲ್ಪನೆಯ ಮೇಲೆ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಶೃಂಗಸಭೆಯು ಪ್ರಮುಖ ಚರ್ಚೆಗಳಿಗೆ ಮತ್ತು   ಸಮುದಾಯಗಳು  ಪರಿವರ್ತನೆಯ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಲು  ವೇದಿಕೆಯನ್ನು ಒದಗಿಸುವ ನಮ್ಮ ಪ್ರಯತ್ನವಾಗಿದೆ, ”ಎಂದು ಹವಾಮಾನ ಶಿಕ್ಷಣ ಜಾಲದ ಸಹ-ಸಂಸ್ಥಾಪಕಿ ಸುನಯನ ಗಂಗೂಲಿ ಹೇಳಿದರು.

ಹವಾಮಾನ ಶಿಕ್ಷಕರ ಜಾಲ 

ಹವಾಮಾನ ಶಿಕ್ಷಕರ ಜಾಲ (CEN) ಇದು ವಿವಿಧ ಪ್ರದೇಶಗಳ ಮತ್ತು ಉತ್ಸಾಹಿ ಶಿಕ್ಷಕರ ಸಮೂಹವಾಗಿದ್ದು, ಶಿಕ್ಷಣದ ಮೂಲಕ ಸಮಗ್ರ, ಒಳಗೊಳ್ಳುವ ಮತ್ತು ಹವಾಮಾನ ಸ್ಥಿತಿಸ್ಥಾಪಕ ಸಮಾಜಗಳನ್ನು ರಚಿಸುವ  ಉದ್ದೇಶಕ್ಕಾಗಿ ಒಂದುಗೂಡಿದ್ದು ಆ ಉದ್ದೇಶಕ್ಕೆ ಬದ್ಧವಾಗಿದೆ. ಅನೇಕ ವರ್ಷಗಳ ಅನುಭವ ಹೊಂದಿರುವ ಅನುಭವಿ ಹವಾಮಾನ ಶಿಕ್ಷಕರಿಂದ ಮೊದಲುಗೊಂಡು ಈಗಷ್ಟೇ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದವರವರೆಗೆ, CEN ಸಮುದಾಯವು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಹವಾಮಾನ ಉಪಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಬೆಂಬಲವನ್ನು ನಿರೀಕ್ಷಿಸುವ ಎಲ್ಲರಿಗೂ ಸಮಾನ ವೇದಿಕೆಯನ್ನು ಒದಗಿಸುತ್ತದೆ.


ಹೆಚ್ಚಿನ ವಿವರಗಳಿಗೆ, ದಯವಿಟ್ಟು ಸಂಪರ್ಕಿಸಿ:

ಶ್ರೀನಿಧಿ ಅಡಿಗ, ಅಸರ್: 9844239283

ಮೈತ್ರೇಯಿ ರಮೇಶ್, ಅಸರ್: 9011773728

ಅರ್ಜುನ್ ಆತ್ರೇಯ, ಅಸರ್: 8723965583

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation