ಶಿವಮೊಗ್ಗ ಮೆಟ್ರೋ ಯುನೈಟೆಡ್ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯ – ಮಹಿಳೆಯ ಸಾವು, ಪ್ರಭಾವಿ ರಾಜಕಾರಣಿಯ ವರದಿ ತಿದ್ದಾಟ?
ಶಿವಮೊಗ್ಗ ಮೆಟ್ರೋ ಯುನೈಟೆಡ್ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯ ಮಹಿಳೆಯ ಸಾವುಪ್ರಭಾವಿ ರಾಜಕಾರಣಿಯ ವರದಿ ತಿದ್ದಾಟ?

ಬೆಂಗಳೂರು : ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ. ತೇಜಸ್ವಿಯವರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, 2021ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ಸುಜಾತ ಅವರ ಸಾವಿಗೆ ಕಾರಣವಾಗಿದ್ದಾರೆ ಎಂಬ ಆರೋಪವಾಗಿದೆ.
ಪೀಡಿತ ಕುಟುಂಬದ ಪ್ರಕಾರ, ಸಿ.ಟಿ. ಸ್ಕ್ಯಾನ್ ವರದಿಯನ್ನು ತಿದ್ದುಪಡಿ ಮಾಡಿದ್ದು, ಅಸಲಿ ರೋಗದ ಗಂಭೀರತೆ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಹಣಕ್ಕಾಗಿ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಮುಕ್ತಾಯವಿಲ್ಲದ ಚಿಕಿತ್ಸೆ ನೀಡಿ, ಯಾವುದೇ ಸರಿಯಾದ ದಾಖಲಾತಿಗಳನ್ನು ನೀಡದೇ, ಬಳಿಕ ಮೃತದೇಹವನ್ನು ಹಸ್ತಾಂತರಿಸಲು ಹಣಕ್ಕಾಗಿ ಪೀಡನೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಉಂಟಾಗಿದೆ.
ಸರ್ಕಾರಕ್ಕೆ ದೂರು, ತನಿಖಾ ವರದಿಯಲ್ಲಿ ತಿರುಗಾಟ?
ಪೀಡಿತರು 2024ರ ಆಗಸ್ಟ್ 22ರಂದು ಈ ಬಗ್ಗೆ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಗೃಹ ಸಚಿವರು ಹಾಗೂ ರಾಜ್ಯಪಾಲರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿತು. ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರ ತಂಡವನ್ನು ರಚಿಸಿ ತನಿಖೆ ನಡೆಸಿದರೂ, ವರದಿ ವೈದ್ಯರ ಪರವಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಮರು ದೂರು ಸಲ್ಲಿಸಿದ ಬಳಿಕ ಮತ್ತೊಮ್ಮೆ ತನಿಖೆ ನಡೆಸಿದರೂ, ಪರಿಶೀಲನೆ ಯಥಾಸ್ಥಿತಿಯಲ್ಲಿಯೇ ಉಳಿದಿದೆ. ಡಾ. ತೇಜಸ್ವಿಯು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಅಳಿಯನಾಗಿರುವ ಕಾರಣ, ಅವರ ರಾಜಕೀಯ ಪ್ರಭಾವದ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳು ವೈದ್ಯರ ಪರವಾಗಿ ವರದಿ ನೀಡುತ್ತಿರುವ ಆರೋಪವೂ ಕೇಳಿ ಬಂದಿದೆ.
“ನ್ಯಾಯ ಸಿಗದೆ ದಯಾಮರಣವೇಕೆ?”
State Social Liberty Forum ಈ ಪ್ರಕರಣವನ್ನು ಸಿ.ಒ.ಡಿ. ತನಿಖೆಗೆ ಒಪ್ಪಿಸಿ, ಪೀಡಿತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿದೆ. ಪೀಡಿತರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ನ್ಯಾಯ ಸಿಗದಿದ್ದರೆ, ದಯಾಮರಣಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
“ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ State Social Liberty Forum ರಾಜ್ಯಾಧ್ಯಕ್ಷ ಎಂ.ಎಸ್. ಮೊಹಿನುದ್ದೀನ್ ಘೋಷಿಸಿದ್ದಾರೆ.
ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುತ್ತದೆಯೇ? ವೈದ್ಯಕೀಯ ನಿರ್ಲಕ್ಷ್ಯ ಆರೋಪಗಳ ಆಳವಾದ ತನಿಖೆ ನಡೆಯುತ್ತದೆಯೇ? ಅಥವಾ ರಾಜಕೀಯ ಪ್ರಭಾವಕ್ಕೆ ನ್ಯಾಯ ತತ್ತರಿಸಬೇಕಾ? – ಎಂಬ ಪ್ರಶ್ನೆಗಳು ಜನಸಾಮಾನ್ಯರ ಮುಂದೆ ನಿಂತಿವೆ.
Comments
Post a Comment