ವೈಟ್‌ಫೀಲ್ಡ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದ ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್

 ವೈಟ್‌ಫೀಲ್ಡ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದ ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್

2 ದಿನಗಳ ಕಾರ್ಯಕ್ರಮದಲ್ಲಿ 18 ಖ್ಯಾತ ಕಲಾವಿದರಿಂದ ಸಂಗೀತ ಸಂಭ್ರಮ

ಬೆಂಗಳೂರು. 6ನೇ ನವೆಂಬರ್ 2023: ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್ ತನ್ನ ಬಹುಜನಪ್ರಿಯ ವೈಟ್‌ಫೀಲ್ಡ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದೆ. ಎರಡು ದಿನಗಳ ಸಂಗೀತ ಸಂಭ್ರಮವು 2023ರ ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಇನ್ನರ್ ಸರ್ಕಲ್ ಮೈದಾನದಲ್ಲಿ ನಡೆಯಲಿದ್ದು, ದೇಶದ ಹೆಸರಾಂತ 18 ಸಂಗೀತ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.


ಮೊದಲ ದಿನ ವಿದುಷಿ ಬಿಂಬಾವತಿ ಸಿಂಗ್ ಮತ್ತು ವಿದುಷಿ ಮಧುಲಿತಾ ಮೊಹಾಪಾತ್ರ ಅವರಿಂದ ಮಣಿಪುರಿ ಮತ್ತು ಒಡಿಸ್ಸಿ ಜುಗಲ್ಬಂದಿ ನಡೆಯಲಿದೆ. ಇಶಾನ್ ಘೋಷ್ ಅವರ ತಬಲಾ ಮತ್ತು ವಿನೋದ್ ಶ್ಯಾಮ್ ಅನೂರು ಮೃದಂಗದೊಂದಿಗೆ ರಕ್ಷಿತಾ ರಮೇಶ್ ಮತ್ತು ಎಸ್.ಆಕಾಶ್ ಅವರ ವೀಣಾ-ವೇಣು ಜುಗಲ್‌ಬಂದಿ ಜರುಗಲಿದೆ. ವಿದುಷಿ ರಂಜನಿ-ಗಾಯತ್ರಿ ಅವರಿಂದ ಕರ್ನಾಟಿಕ್ ಗಾಯನ ವಾದನವೂ ನಡೆಯಲಿದೆ.


2ನೇ ದಿನ ಸಂಗೀತ ರತ್ನ ಪ್ರಬೀರ್ ಭಟ್ಟಾಚಾರ್ಯ ಹಾಗೂ ಪಂ. ಅನಿಂದೋ ಚಟರ್ಜಿ ಅವರಿಂದ ಸಿತಾರ್ ಮತ್ತು ತಬಲಾ ವಾದನ ನಡೆಯಲಿದೆ. ನಂತರ ಉಸ್ತಾದ್ ಮುರಾದ್ ಅಲಿ ಸಾರಂಗಿ, ಪಂಡಿತ್ ಅಜಯ್ ಜೋಗ್ಲೇಕರ್ ಹಾರ್ಮೋನಿಯಂ ಮತ್ತು ಪಂಡಿತ್ ಓಜಸ್ ಅಧಿಯಾ ಅವರ ತಬಲಾ ಸಾಥ್‌ನೊಂದಿಗೆ ವಿದುಷಿ ಕೌಶಿಕಿ ಚಕ್ರವರ್ತಿ ಅವರಿಂದ ಹಿಂದೂಸ್ತಾನಿ ಗಾಯನ ವಾದನ ನಡೆಯಲಿದೆ.


ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್, ಬೆಂಗಳೂರು, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಮತ್ತು ವಿವಿಧ ಚಟುವಟಿಕೆಗಳ ಮೂಲಕ ಯುವ ಪೀಳಿಗೆಯಲ್ಲಿ ಸಂಗೀತ ಬೆಳೆಸುವ ಗುರಿಯನ್ನು ಹೊಂದಿರುವ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. 2011 ರಲ್ಲಿ ಪ್ರಾರಂಭವಾದ ಟ್ರಸ್ಟ್ ಅನ್ನು ಔಪಚಾರಿಕವಾಗಿ 2017 ರಲ್ಲಿ ನೋಂದಾಯಿಸಲಾಯಿತು ಮತ್ತು ನಂತರ ಹಿಂತಿರುಗಿ ನೋಡಲಿಲ್ಲ. ಸಂಗೀತ ಜಗತ್ತಿನಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.


ಆನಂದ ಧ್ವನಿ ಕುರಿತು ಮಾತನಾಡಿದ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ, ಸಂಗೀತ ರತ್ನ ಪ್ರಬೀರ್ ಭಟ್ಟಾಚಾರ್ಯ, “ಪ್ರಸಿದ್ಧ ಸಿತಾರ್ ವಾದಕ ಮತ್ತು ಮೈಹಾರ್ ಘರಾನಾದ ಐಕಾನ್‌ಗಳಲ್ಲಿ ಒಬ್ಬರೂ ಮತ್ತು ಭಾರತ ರತ್ನ ಪಂಡಿತ್ ರವಿಶಂಕರ್ ಅವರ ನೇರ ಶಿಷ್ಯರೂ ಆಗಿದ್ದ ದಿವಂಗತ ಪಂಡಿತ್ ದೀಪಕ್ ಚೌಧರಿ 'ಆನಂದ ಧ್ವನಿ'ಯ ಬೀಜ ಬಿತ್ತಿದವರು. ಈಗ ಅವರ ಶಿಷ್ಯರು ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ದೀಪಕ್‌ ಜೀಯವರ ಸಂಯೋಜನೆಯಾದ ಆನಂದಧ್ವನಿ ಎಂಬ ರಾಗದ ಹೆಸರನ್ನೇ ಟ್ರಸ್ಟ್‌ಗೆ ಇಡಲಾಗಿದೆ” ಎಂದರು. ಈ ಸಲದ ಸಂಗೀತ ಉತ್ಸವಕ್ಕೆ 499 ರೂ. ಪ್ರವೇಶ ಶುಲ್ಕವಿರುತ್ತದೆ. ವೈಟ್‌ಫೀಲ್ಡ್ ಮ್ಯೂಸಿಕ್ ಫೆಸ್ಟಿವಲ್ 2023 ಅನ್ನು ಪಿಸಿ ಚಂದ್ರ ಜ್ಯುವೆಲರ್ಸ್ ಮತ್ತು ರೇಡಿಯೊ ಪಾಲುದಾರ ರೆಡ್ ಎಫ್‌ಎಂ ನಡೆಸುತ್ತಿದೆ. 


ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ - www.anandadhwani.in or Call – 96064 44452

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims