Skip to main content

ಅಚ್ಚರಿಯಾದರೂ ಇದು ಸತ್ಯ.. 14 ದಿನದ ಮಗು ಗರ್ಭಿಣಿ…

 

ಅಚ್ಚರಿಯಾದರೂ ಇದು ಸತ್ಯ.. 14 ದಿನದ ಮಗು ಗರ್ಭಿಣಿ…

ವಾರಾಣಸಿ (ಉತ್ತರ ಪ್ರದೇಶ): ಧಾರ್ಮಿಕ ನಗರಿ ಕಾಶಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ 14 ದಿನಗಳ ಹೆಣ್ಣು ಮಗು ‘ಗರ್ಭಿಣಿ’ ಯಾಗಿರುವ ಅಚ್ಚರಿಯ ಘಟನೆ ನಡೆದಿದೆ. ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ. ಇದನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.

ಈ ಕುರಿತು ವೈದ್ಯರ ತನಿಖೆ ವೇಳೆ ಬಯಲಿಗೆ ಬಂದಿರುವ ವಿಷಯ ಇನ್ನಷ್ಟು ಅಚ್ಚರಿ ಮೂಡಿಸಿದೆ. ವಾಸ್ತವವಾಗಿ, ಆ ಮಗುವಿಗೆ ಹೊಟ್ಟೆಯಿಂದ ಹೊರಬಂದ ಭ್ರೂಣಗಳು ಮಗುವಿನ ಇತರ ಒಡಹುಟ್ಟಿದವರಂತೆಯೇ ಇವೆ. ತಾಯಿಯ ಗರ್ಭದಲ್ಲೇ ಇದ್ದ ಈ ಭ್ರೂಣಗಳು ಈ ಮಗುವಿನ ಹೊಟ್ಟೆಗೆ ವರ್ಗಾವಣೆಯಾಗಿವೆ. ಮಗುವಿನ ಹೊಟ್ಟೆಯಲ್ಲಿ ಈ ರೀತಿಯ ಭ್ರೂಣ ಇದ್ದರೆ ಅದನ್ನು ಫೆಟಸ್ ಫಿಟು ಎಂಬ ರೋಗದ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದು 5 ಲಕ್ಷಗಳಲ್ಲಿ ಒಂದು ಮಗುವಿನಲ್ಲಿ ಕಂಡುಬರುತ್ತದೆ. ಮಗುವಿನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಇತರ ಭ್ರೂಣಗಳು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗದ ಕಾರಣ, ಬೆಳವಣಿಗೆ ಹೊಂದುತ್ತಿದ್ದ ಈ ಮಗುವಿನ ಹೊಟ್ಟೆಗೆ ವರ್ಗಾಯಿಸಲ್ಪಡುತ್ತವೆ ಅಂತಾರೆ ವೈದ್ಯರು.

ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಹೇಗೆ ಗೊತ್ತಾಯಿತು: 14 ದಿನದ ಹೆಣ್ಣು ಮಗು ಹೊಟ್ಟೆಯಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಇದಾದ ಬಳಿಕ ಮಗುವನ್ನು ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳಿರುವುದು ಪತ್ತೆಯಾಗಿತ್ತು. ನಂತರ ವೈದ್ಯರು ಸಿಟಿ ಸ್ಕ್ಯಾನ್ ಮಾಡಿ ಈ ವಿಷಯ ದೃಢಪಡಿಸಿದ್ದರು.

ಮಗುವಿಗೆ ವೈದ್ಯರ ತಂಡದಿಂದ ಮೂರು ಗಂಟೆ ಶಸ್ತ್ರ ಚಿಕಿತ್ಸೆ: ಬಾಲಕಿಯ ಗರ್ಭದಲ್ಲಿ ಭ್ರೂಣ ಇರುವುದು ದೃಢಪಟ್ಟ ನಂತರ ಡಾ.ರುಚಿರಾ ನೇತೃತ್ವದ ಆರು ಮಂದಿ ವೈದ್ಯರ ತಂಡ, ಸತತ ಮೂರು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆಯ ನಂತರ ಮಾತನಾಡಿದ ಡಾ. ರುಚಿರಾ, ತಾಯಿಯ ಗರ್ಭದಿಂದ ಮಗುವಿನ ಹೊಟ್ಟೆಗೆ ಭ್ರೂಣಗಳು ವರ್ಗಾವಣೆಯಾಗಿವೆ ಎಂದು ಹೇಳಿದರು.

ತ್ರಿವಳಿ ಭ್ರೂಣದಿಂದಾಗಿ 14 ದಿನದ ಹೆಣ್ಣು ಮಗುವಿನ ಪಿತ್ತರಸ ನಾಳ ಮತ್ತು ಕರುಳುಗಳಿಗೆ ಅಡಚಣೆ ಉಂಟಾಗಿತ್ತು. ಇದರಿಂದ ಮಗುವಿಗೆ ಜಾಂಡೀಸ್ ಕಾಣಿಸಿಕೊಂಡಿತ್ತು. ಇದರಿಂದ ಉಸಿರಾಟಕ್ಕೆ ತೊಂದರೆ ಕೂಡಾ ಆಗುತ್ತಿತ್ತು. ಮತ್ತು ಹೊಟ್ಟೆಯಲ್ಲಿ ಊತ ಸಹ ಕಾಣಿಸಿಕೊಂಡಿತ್ತು. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಈಗ ಮಗುವನ್ನು ವೈದ್ಯರು ಮೇಲ್ವಿಚಾರಣೆಯಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಐದು ಲಕ್ಷದಲ್ಲಿ ಒಂದು ಮಗುವಿಗೆ ಇಂತಹ ಸಮಸ್ಯೆ: ಡಾ.ರುಚಿರಾ ಮಾತನಾಡಿ, ಇದೊಂದು ಅತ್ಯಂತ ಸಂಕೀರ್ಣ ಕಾಯಿಲೆಯಾಗಿದೆ. ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಚಿಕಿತ್ಸೆಯ ವೆಚ್ಚ ಅತಂತ್ಯ ದುಬಾರಿಯಾಗಿರುತ್ತದೆ. ಆದರೆ, ಬಿಎಚ್‌ಯುನ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"